ರಾಷ್ಟ್ರೋದ್ಧಾರಕೆ ಶ್ರಮಿಸಿದ ಯೋಗಿ

ರಾಷ್ಟ್ರೋದ್ಧಾರಕೆ ಶ್ರಮಿಸಿದ ಯೋಗಿ
ಸ್ವದೇಶ ಸ್ವಧರ್ಮಗಳನುರಾಗಿ                       || ಪ ||

ಸೀತಾಬರ್ಡಿಯ ಕಿಲ್ಲೆಯ ಮೇಲೆ
ದಾಸ್ಯದ ಧ್ವಜ ಹಾರಾಡುತಲಿರಲು
ಕೊಠಡಿಯ ನೆಲದಿಂ ಕೋಟೆಯ ಒಳಕೆ
ಅಗೆದು ಸುರಂಗವ ಅದ ಕಿತ್ತೆಸೆಯುವ
ಸಾಹಸ ಸ್ಪುರಿಸಿತು ಹಸುಳೆಯ ಮನದಿ        || 1 ||

ಆಂಗ್ಲ ಗುಲಾಮಿಯ ವೀಕ್ಷಕನೋರ್ವ
ಶಾಲೆಯ ದ್ವಾರದಿ ಕಾಲನ್ನಿಡಲು
ಸಿಡಿಯಿತದೋs ‘ವಂದೇ ಮಾತರಂ’
ಸಾವಿರ ಕಂಠದ ಸಿಡಿಲಿನ ಘೋಷ
ಧೀರ ಕಿಶೋರನ ಮುಂದಾಳ್ತನದಿ                || 2 ||

ಮೊದಲಿಗೆ ಶಿಕ್ಷಣ ಪೂರೈಸೆಂದು
ದೇಶದ ಸೇವೆಯು ನಂತರವೆಂದು
ಹಿರಿಯರದೋರ್ವರು ಉಪದೇಶಿಸಲು
ಮರುಕ್ಷಣ ಹೇಳಿದ – ಒಪ್ಪಿದೆ ಮಾತನು
ತಾವೇತಕೆ ಬರಬಾರದು ಎಂದು                  || 3 ||

ಎದೆಯೊಳು ತಳಮಳ ತೀವ್ರತೆ ಮನದಿ
ತಾನಾಗಿಯೆ ಶ್ರಮಿಸುವ ಹಂಬಲದಿ
ಮೈ ಸುಡುಸುಡುತಿದ್ರು ಮೇಲೆದ್ದು
ನಡುನಿಶೆಯಲಿ ನಿಶ್ಶಬ್ದದಿ ಹೊರಟರು
ವಾಹನ ಹುಡುಕಲು ನಗರದೊಳಂದು    || 4 ||

ದರ್ಪದ ಮೂರ್ತಿಯ ತೆರದೊಳಗಿದ್ದ
ಅಭ್ಯಂಕರರಂತಹರನು ಗೆದ್ದ
ಗುಣವಂತಿಕೆ ಸಚ್ಚರಿತೆಯ ಮೂರ್ತಿ
ಕಠಿಣತೆ ತೀವ್ರ ವಿರೋಧವ ಎದುರಿಸಿ
ಹೃದಯವ ಆಳಿದ ಅಳಿಯದ ಕೀರ್ತಿ      || 5 ||

ಸಾಧನೆ ಶಾಶ್ವತವಾಗುಳಿವಂತೆ
ನಿಶಿದಿನ ಸಂಘಟನೆಯದೇ ಚಿಂತೆ
ಮುಂದಿನ ದಿಗ್ದರ್ಶಕ ಯಾರಂತೆ
ಎನ್ನುವ ಪ್ರಶ್ನೆಯೆ ಏಳದ ತೆರದೊಳು
ನೇಮಿಸಿ ನಡೆದರು ದೃಢನಾಯಕನ       || 6 ||

Leave a Reply

Your email address will not be published. Required fields are marked *