ಸೇವೆಯ ಸೇತುವೆ ಕಟ್ಟಲು ಬನ್ನಿ

ಸೇವೆಯ ಸೇತುವೆ ಕಟ್ಟಲು ಬನ್ನಿ ವ್ಯಕ್ತಿ ಸಮಾಜದ ನಡುವೆ
ನಾಡದೇವತೆಗೆ ಅರ್ಪಿಸಬನ್ನಿ ತನುಮನಧನಗಳ ಒಡವೆ || ಪ ||

ಸೇವೆಯೆ ತತ್ವದ ಸಾರವು ನಿಜದಿ ಸೇವೆಯೆ ಜೀವನ ಧರ್ಮ
ಸ್ವಾರ್ಥದುರಾಶೆಯ ನೀಗಿಸಿ ಬಾಳನು ಸಾರ್ಥಕಗೊಳಿಸುವ ಮರ್ಮ
ಕಂಗೆಡಿಸುವ ಕಗ್ಗತ್ತಲಕೂಪದಿ ಸೇವೆಯೆ ದಾರಿದೀಪ
ದುಃಖಿತ ಜನತೆಯ ಕಂಬನಿಯೊರೆಸುವ ಕರುಣೆಯ ಮಾತೃಸ್ವರೂಪ || 1 ||

ಅಕ್ಷರವಿದ್ಯೆಯ ಕಲಿಸಿ ನಿರಕ್ಷುರಕುಕ್ಷಿಗಳಿಗೆ ಒಲವಿಂದ
ಅಕ್ಷಯ ರಕ್ಷಣೆ ನೀಡುತ ಶೋಷಿತ ಜನತೆಗೆ ಛಲಬಲದಿಂದ
ಕಾರ್ಪಣ್ಯದ ಘಟಸರ್ಪದ ದರ್ಪವ ಮುರಿಯಲು ಸೇವೆಯೆ ಮಾರ್ಗ
ತ್ಯಾಗ ಸಮರ್ಪಣಭಾವದಿ ದುಡಿದರೆ ಧರೆಯಿದು ಆಗದೆ ಸ್ವರ್ಗ? || 2 ||

ಮನೆಮನೆಯಾಗಲಿ ಸೇವಾಧಾಮ ಚಿರವಾತ್ಸಲ್ಯದ ಸೆಲೆಯು
ನೋವಲಿ ನರಳಿಹ ಹತಭಾಗ್ಯರಿಗೆ ನಲಿವನು ನೀಡುವ ನೆಲೆಯು
ಅಸ್ಪೃಶ್ಯತೆ ಅನ್ಯಾಯವನಳಿಸಲು ಗೈಯುವ ದೃಢಸಂಕಲ್ಪ
ಭಾರತಮಾತೆಯ ಆರಾಧನೆಗೆ ಅರ್ಪಿಸಿ ಜೀವನಪುಷ್ಪ || 3 ||

Leave a Reply

Your email address will not be published. Required fields are marked *