ಉಚ್ಚಕಂಠದೊಳು ಉಚ್ಚರಿಸಿ

ಉಚ್ಚಕಂಠದೊಳು ಉಚ್ಚರಿಸಿ ಸಜ್ಜನಶಕ್ತಿಯನೆಚ್ಚರಿಸಿ
ದಿವ್ಯಮಂತ್ರವ ಘೋಷಿಸುವಾss ‘ಕೃಣ್ವಂತೋ ವಿಶ್ವಮಾರ್ಯಂ’ || ಪ ||

ಜಗದ ಆದಿ ಪ್ರಾಚೀನ ಸಮಯದಿಂ ಮಂತ್ರವೆಮಗೆ ಸಂಗಾತಿ
ದೂರದೂರಕೂ ಕಂಪು ತುಂಬಿರುವ ಆರ್ಯಧರ್ಮದಾ ಖ್ಯಾತಿ
ಕಾಲಚಕ್ರವದು ತಿರುಗಿರೆ ಭರದಿ ಮರೆಯಾಯಿತು ಆದರ್ಶ
ನವ ಸೂರ್ಯೋದಯ ತಂದಿಹುದಿಂದು ಪ್ರಭಾತದುಜ್ವಲ ಸ್ಪರ್ಶ
ಯುಗದ ಸವಾಲನು ಉತ್ತರಿಸಿ ಸಜ್ಜನಶಕ್ತಿಯನೆಚ್ಚರಿಸಿ || 1 ||

ವೇದಕಾವ್ಯ ಉಪನಿಷದ್‍ವಾಕ್ಯಗಳು ತೋರಿವೆ ಬಾಳಿನ ಗುರಿಯಾ
ರಾಮಾಯಣ ಪಾವನ ಗೀತಾಮೃತ ಹರಿಸಿವೆ ಜ್ಞಾನದ ಝರಿಯಾ
ಜಗದುದ್ದಗಲದಿ ಕಂಗೊಳಿಸುತಲಿಹ ಸಂಸ್ಕೃತಿಯಾ ಅವಶೇಷಗಳು
ನವನಿರ್ಮಾಣಕೆ ಪ್ರೇರಣೆ ನೀಡಿಹ ಜಾಗೃತಿಯಾ ಸಂದೇಶಗಳು
ನಾಡಕೀರ್ತಿಯನು ಎತ್ತರಿಸಿ ಸಜ್ಜನಶಕ್ತಿಯನೆಚ್ಚರಿಸಿ || 2 ||

ಅಖಿಲ ವಿಶ್ವದೊಳು ಮತ್ತೆ ಮೆರೆಯಲಿದೆ ಉನ್ನತ ಧ್ವಜ ಭಗವೆಯ ಲಾಸ್ಯ
ಮೂರು ಲೋಕದೊಳು ಮಾರ್ದನಿಗೊಳಲಿದೆ ಆರ್ಯಧರ್ಮದಾ ಜಯಘೋಷ
ದಿವ್ಯಶಾಸ್ತ್ರಗಳು ತೋರಿದ ಪಥದಲಿ ನವಾನ್ವೇಷಣೆಯಗೈಯೋಣ
ಆರ್ಯಮಾತೆಯನು ಆರಾಧಿಸುತಾ ಮನುಜನ ಅಮರತೆಗೊಯ್ಯೋಣ
ನಮ್ಮೀ ಜಗವನು ಉದ್ಧರಿಸಿ ಸಜ್ಜನಶಕ್ತಿಯನೆಚ್ಚರಿಸಿ || 3 ||

Leave a Reply

Your email address will not be published. Required fields are marked *